ರಾಮು ಎಂಟರ್ ಪ್ರೈಸಸ್ನ ಮೂವತ್ತೆರಡನೇ ಕಾಣಿಕೆ ‘ಶಕ್ತಿ ಚಿತ್ರಕ್ಕಾಗಿ ಕೆ.ಕಲ್ಯಾಣ್ ಬರೆದಿರುವ ‘ಬಂಡಿ ಸಾಗುತ್ತಿದೆ ಒಂಟಿ ಬಂಡಿ ಸಾಗುತ್ತಿದೆ ಎಂಬ ಗೀತೆಯ ಚಿತ್ರೀಕರಣ ಗೌರಿಬಿದನೂರು ಬಳಿ ನಡೆದಿದೆ. ನಾಯಕಿ ಮಾಲಾಶ್ರೀ ಈ ಹಾಡಿನ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.
‘ಮುತ್ತಿನಂಥ ಹೆಂಡತಿ ಚಿತ್ರ ಸೇರಿದಂತೆ ಎರಡು ವರ್ಷಗಳ ಹಿಂದೆ ತೆರೆ ಕಂಡ ‘ಕನ್ನಡದ ಕಿರಣ್ಬೇಡಿವರೆಗೂ ರಾಮು ಎಂಟರ್ ಪ್ರೈಸಸ್ನ ಎಂಟು ಚಿತ್ರಗಳಲ್ಲಿ ಮಾಲಾಶ್ರೀ ನಟಿಸಿದ್ದಾರೆ. ಬ್ರಷ್ಟಾಚಾರದ ವಿರುದ್ಧ ಸಿಡಿದೇಳುವ ‘ಶಕ್ತಿ‘ಯಾಗಿ ಮಾಲಾಶ್ರೀ ಅಭಿನಯಿಸುತ್ತಿದ್ದಾರೆ.
ಅನಿಲ್ ಈ ಚಿತ್ರದ ನಿರ್ದೇಶಕರು. ಸಂಭಾಷಣೆಕಾರರಾಗಿ ಚಿತ್ರರಂಗ ಪ್ರವೇಶಿಸಿದ ಅನಿಲ್ಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ. ‘ಶಕ್ತಿಗೆ ಚಿತ್ರಕಥೆ ಹಾಗೂ ಸಂಭಾಷಣೆಯನ್ನೂ ಇವರೇ ಬರೆದಿದ್ದಾರೆ.
ಥ್ರಿಲ್ಲರ್ಮಂಜು, ರವಿವರ್ಮ, ರಾಮ್ಲಕ್ಷ್ಮಣ್ ಮತ್ತು ಪಳನಿರಾಜ್ ಸಾಹಸ ನಿರ್ದೇಶನ, ರಾಜೇಶ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಲಕ್ಷ್ಮಣ್ ರೆಡ್ಡಿ ಅವರ ಸಂಕಲನವಿದೆ. ಮಾಲಾಶ್ರೀ, ರವಿಶಂಕರ್, ಶಯಾಜಿರಾವ್ ಶಿಂಧೆ, ವಿನಯಾಪ್ರಸಾದ್, ಹೇಮಾಚೌಧರಿ, ಅವಿನಾಶ್, ಶರತ್ ಲೋಹಿತಾಶ್ವಾ, ಸಾಧುಕೋಕಿಲಾ, ಕುರಿಗಳು ಪ್ರತಾಪ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.